July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ

ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಇತ್ತೀಚೆಗೆ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದ ವಿಕಲಚೇತನ ವ್ಯಕ್ತಿಯೊಬ್ಬರ ₹8 ಲಕ್ಷಕ್ಕೂ ಅಧಿಕ ಬ್ಯಾಂಕ್ ಸಾಲವನ್ನು ಕೇವಲ ₹15 ಸಾವಿರ ಪಾವತಿಗೆ ಇತ್ಯರ್ಥಗೊಳಿಸುವ ಮೂಲಕ ನ್ಯಾಯಾಂಗ ಮತ್ತು ಬ್ಯಾಂಕ್ ಅಧಿಕಾರಿಗಳು ಮಾನವೀಯತೆಗೆ ಹೊಸ ಅರ್ಥ ನೀಡಿದರು.

ಮಾಹಿತಿಯ ಪ್ರಕಾರ, ತೀವ್ರ ದೈಹಿಕ ಅಸಮರ್ಥತೆ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ವಿಕಲಚೇತನ ವ್ಯಕ್ತಿಯೊಬ್ಬರು ಜೀವನ ನಿರ್ವಹಣೆಯ ಸಲುವಾಗಿ ಕೆನರಾ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗದೆ, ಬಡ್ಡಿ ಸೇರಿದಂತೆ ಸಾಲದ ಮೊತ್ತ ₹8 ಲಕ್ಷಕ್ಕೂ ಅಧಿಕವಾಗಿ ಏರಿಕೆಯಾಗಿತ್ತು. ಬಳಿಕ ಸಾಲ ವಸೂಲಾತಿಗಾಗಿ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿದ್ದು, ಇದರಿಂದ ಸಾಲಗಾರ ಹಾಗೂ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಪ್ರಕರಣದ ವಿಚಾರಣೆ ವೇಳೆ ಸಾಲಗಾರನ ದುಸ್ಥಿತಿಯನ್ನು ಮನಗಂಡ ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಸೀಮಿತವಾಗದೆ, ಮಾನವೀಯ ದೃಷ್ಟಿಕೋನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಅವರು ಸ್ವತಃ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಕಾನೂನು ವಿಭಾಗದ ಅಧಿಕಾರಿಗಳೊಂದಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದಲ್ಲಿದ್ದ ಸಾಲಗಾರನ ಬಳಿಗೆ ತೆರಳಿ ಪರಿಸ್ಥಿತಿಯನ್ನು ಆಲಿಸಿ ಸಮಾಲೋಚನೆ ನಡೆಸಿದರು.

ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ನಡೆದ ಸೌಹಾರ್ದಯುತ ಮಾತುಕತೆಯ ಬಳಿಕ ಬ್ಯಾಂಕ್ ಅಧಿಕಾರಿಗಳು ಕೂಡ ಸಾಲಗಾರನ ಪರಿಸ್ಥಿತಿಗೆ ಸ್ಪಂದಿಸಿ ಮಾನವೀಯತೆ ಮೆರೆದರು. ಪರಿಣಾಮ, ₹8 ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಮನ್ನಾ ಮಾಡಿ, ಕೇವಲ ₹15 ಸಾವಿರ ಪಾವತಿಗೆ ಪ್ರಕರಣವನ್ನು ಪೂರ್ಣವಾಗಿ ಇತ್ಯರ್ಥಗೊಳಿಸಲು ಒಪ್ಪಿಗೆ ಸೂಚಿಸಿದರು.

ಈ ನಿರ್ಧಾರದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ವಿಕಲಚೇತನ ವ್ಯಕ್ತಿ ಹಾಗೂ ಅವರ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ದೊರೆತಿದ್ದು, ಲೋಕ ಅದಾಲತ್‌ನ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ.

ಈ ಘಟನೆ, ಲೋಕ ಅದಾಲತ್‌ಗಳು ಕೇವಲ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸುವ ವೇದಿಕೆಗಳಷ್ಟೇ ಅಲ್ಲ, ಸಮಾಜದ ದುರ್ಬಲ ವರ್ಗದವರ ಬದುಕಿಗೆ ಆಶಾಕಿರಣವಾಗುವ ಮಾನವೀಯ ನ್ಯಾಯದ ಕೇಂದ್ರಗಳೂ ಆಗಿವೆ ಎಂಬುದನ್ನು ಸ್ಪಷ್ಟಪಡಿಸಿದೆ.

ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರ ಸಂವೇದನಾಶೀಲ ನಡೆ ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳ ಸಹೃದಯ ನಿರ್ಧಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಕಾನೂನಿನೊಂದಿಗೆ ಮಾನವೀಯತೆ ಕೈಜೋಡಿಸಿದಾಗ ನ್ಯಾಯ ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಎಂಬ ಸಂದೇಶವನ್ನು ಈ ಘಟನೆ ಸಾರಿದೆ.

You may also like

News

ಸೂರಿಕುಮೇರು ಚರ್ಚ್ ವ್ಯಾಪ್ತಿಯ ಹಿರಿಯ ಕೃಷಿಕೆ ಮೆರ್ಸಿನ್ ಪಿಂಟೋ ನಿಧನ

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ ಡಿಸೋಜ ಬಜ್ಪೆ ಹಾಗೂ AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರಿಂದ ತೀವ್ರ ಸಂತಾಪ ಸೂರಿಕುಮೇರು ಚರ್ಚ್ ವ್ಯಾಪ್ತಿಯ ಬರಿಮಾರು
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page