ಸೂರಿಕುಮೇರು ಚರ್ಚ್ ವ್ಯಾಪ್ತಿಯ ಹಿರಿಯ ಕೃಷಿಕೆ ಮೆರ್ಸಿನ್ ಪಿಂಟೋ ನಿಧನ
ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ ಡಿಸೋಜ ಬಜ್ಪೆ ಹಾಗೂ AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅವರಿಂದ ತೀವ್ರ ಸಂತಾಪ


ಸೂರಿಕುಮೇರು ಚರ್ಚ್ ವ್ಯಾಪ್ತಿಯ ಬರಿಮಾರು ಗ್ರಾಮದ ಪ್ರತಿಷ್ಠಿತ ಪಿಂಟೋ ಮನೆತನದ ಹಿರಿಯ ಸದಸ್ಯೆ, ಪ್ರಗತಿಪರ ಕೃಷಿಕೆ ಹಾಗೂ ಸಮಾಜಮುಖಿ ವ್ಯಕ್ತಿತ್ವದ 84 ವರ್ಷ ಪ್ರಾಯದ ಮೆರ್ಸಿನ್ ಪಿಂಟೋ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ಬುಧವಾರ ಜುಲೈ 15ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ದಿವಂಗತ ಜೆರ್ಮಿ ಪಿಂಟೋ ಅವರ ಧರ್ಮಪತ್ನಿಯಾಗಿದ್ದು, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಶ್ರಮ, ಪ್ರಾಮಾಣಿಕತೆ ಮತ್ತು ಸರಳತೆಯ ಬದುಕಿನ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಸಂಪಾದಿಸಿದ್ದರು. ಕೃಷಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಗ್ರಾಮೀಣ ಜೀವನದ ಮೌಲ್ಯಗಳನ್ನು ಉಳಿಸಿಕೊಂಡು, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಬದುಕಿದ ಅವರು ಸಮಾಜದಲ್ಲಿ ಆದರ್ಶ ಹಿರಿಯರಾಗಿ ಗುರುತಿಸಿಕೊಂಡಿದ್ದರು.

ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದ ಮೆರ್ಸಿನ್ ಪಿಂಟೋ ಅವರು ಸೂರಿಕುಮೇರು ಚರ್ಚ್ ಹಾಗೂ ಬರಿಮಾರು ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತಮ್ಮಿಂದಾದ ಸಹಕಾರವನ್ನು ನೀಡುತ್ತಾ ಬಂದಿದ್ದರು. ಅವರ ಸರಳ ವ್ಯಕ್ತಿತ್ವ, ಸೇವಾ ಮನೋಭಾವ ಹಾಗೂ ಸೌಹಾರ್ದಯುತ ನಡೆ-ನುಡಿ ಅವರನ್ನು ಎಲ್ಲರ ಪ್ರೀತಿಗೆ ಪಾತ್ರರನ್ನಾಗಿಸಿತ್ತು.
ಮೃತರು 4 ಪುತ್ರರು, 6 ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಓರ್ವ ಪುತ್ರಿ ಫ್ಲೋರಿನ್ ಪಿಂಟೊ ಅವರು ಧರ್ಮ ಭಗಿನಿಯಾಗಿದ್ದಾರೆ.
ಅವರ ಅಗಲಿಕೆಯಿಂದ ಬರಿಮಾರು ಗ್ರಾಮ ಹಾಗೂ ಸೂರಿಕುಮೇರು ಚರ್ಚ್ ವ್ಯಾಪ್ತಿಯು ಒಬ್ಬ ಹಿರಿಯ ಮಾರ್ಗದರ್ಶಕಿ, ಸಮಾಜಸೇವಕಿ ಹಾಗೂ ಆದರ್ಶ ಕೃಷಿಕೆಯನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಬಂಧು-ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ನಿಕಟ ಪೂರ್ವ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಪ್ರಥಮ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ವಲೆನ್ಸಿಯಾ, ದ್ವಿತೀಯ ಉಪಾಧ್ಯಕ್ಷ ಸುನಿಲ್ ರೋಬರ್ಟ್ ಮೊನಿಸ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೇರಳಬೈಲ್, ಸಹ ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್ ಆಮ್ಮೆಂಬಳ್, ಖಜಾಂಚಿ ಫ್ರಾನ್ಸಿನ್ ಮೊಂತೇರೊ ಮರಿಯಾಶ್ರಮ್ ತಲಪಾಡಿ, ಸಹ ಖಜಾಂಚಿ ಸ್ಟ್ಯಾನಿ ಮಿರಾಂದ ಕಿನ್ನಿಗೋಳಿ, ಸೂರಿಕುಮೇರು-ಬರಿಮಾರು ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಎಲಿಯಾಸ್ ಪಿರೇರಾ, ರೋಷನ್ ಬೊನಿಫಾಸ್ ಮಾರ್ಟಿಸ್, ಮಾಜಿ ಕಾರ್ಯದರ್ಶಿಗಳಾದ ಸ್ಟೀವನ್ ಆಲ್ವಿನ್ ಪಾಯ್ಸ್, ಮೇರಿ ಡಿಸೋಜ, ಪ್ರೀತಿ ಲ್ಯಾನ್ಸಿ ಪಿರೇರಾ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು-ಬೊರಿಮಾರ್ ಘಟಕದ ಮಾಜಿ ಅಧ್ಯಕ್ಷ ತೊಮಸ್ ಲಸ್ರಾದೊ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಅವರ ಆತ್ಮಕ್ಕೆ ದೇವರು ನಿತ್ಯಶಾಂತಿ ಕರುಣಿಸಲಿ ಹಾಗೂ ಅವರು ತೋರಿದ ಸೇವೆ, ಸರಳತೆ ಮತ್ತು ಮಾನವೀಯ ಮೌಲ್ಯಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿ ಎಂದು ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಲಾಗಿದೆ.




