July 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಾಲಾ ವಾಹನ ದುರಂತ – ಸೂಕ್ತ ದಾಖಲೆಗಳಿಲ್ಲದೆ ಬಸ್ ಚಾಲನೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಮಾರ್‌ನಲ್ಲಿ ಜುಲೈ 22ರಂದು ಸಂಭವಿಸಿದ ಶಾಲಾ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ:

ದಿನಾಂಕ 22.07.2026ರಂದು ಬರಿಮಾರ್ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಬೃಹತ್ ಮರವೊಂದು ಬಿದ್ದು, ವಾಹನದಲ್ಲಿದ್ದ ಬಾಲಕಿಯೊಬ್ಬಳು ಮೃತಪಟ್ಟು ಇತರ ಕೆಲವು ಮಕ್ಕಳು ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಯು.ಡಿ.ಆರ್ (ಅಸ್ವಾಭಾವಿಕ ಸಾವು) ಸಂಖ್ಯೆ 35/2026, ಕಲಂ 194 BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆಯಲ್ಲಿ ಹೊರಬಿದ್ದ ಆಘಾತಕಾರಿ ಸತ್ಯ:

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (RTO) ಶಾಲಾ ವಾಹನದ ದಾಖಲೆಗಳ ಮಾನ್ಯತೆಯ ಕುರಿತು ವರದಿ ಪಡೆದುಕೊಂಡಿದ್ದಾರೆ. ಈ ವರದಿಯಲ್ಲಿ ಹಲವು ಗಂಭೀರ ಅಕ್ರಮಗಳು ಕಂಡುಬಂದಿವೆ:

* ದಾಖಲೆಗಳ ಕೊರತೆ: ಘಟನೆ ನಡೆದ ಸಮಯದಲ್ಲಿ ಸದ್ರಿ ಶಾಲಾ ವಾಹನದ ವಿಮಾ ಪತ್ರ (Insurance) ಹಾಗೂ ಅರ್ಹತಾ ಪತ್ರ (FC/Fitness Certificate) ಚಾಲ್ತಿಯಲ್ಲಿರಲಿಲ್ಲ.

* ಮಾಲಕತ್ವದ ಗೊಂದಲ: ಈ ವಾಹನವು ಶ್ರೀರಾಮ ವಿದ್ಯಾಕೇಂದ್ರದ ಹೆಸರಿನಲ್ಲಿ ನೋಂದಣಿಯಾಗದೆ, ಬೇರೊಂದು ಟ್ರಸ್ಟ್‌ನ ಮಾಲಕತ್ವದಲ್ಲಿದೆ ಎಂಬುದು ಬೆಳಕಿಗೆ ಬಂದಿದೆ.

ಎಫ್‌ಐಆರ್ ದಾಖಲು:

ಅಗತ್ಯ ಕಾನೂನು ದಾಖಲೆಗಳಿಲ್ಲದೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುವ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ಚಲಾಯಿಸಲು ಕಾರಣರಾದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.

ಪೊಲೀಸರು ಅ.ಕ್ರ: 109/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 125 ಹಾಗೂ ಮೋಟಾರು ವಾಹನ ಕಾಯ್ದೆಯ (IMV Act) ಕಲಂ 196, 192(1) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

You may also like

News

ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿಗೆ ಹೆಚ್ಚುವರಿ ಜವಾಬ್ದಾರಿ

ಜಂತರ್‌-ಮಂತರ್ ವಿದ್ಯಾರ್ಥಿ ಹೋರಾಟಕ್ಕೆ ತೆರೆ – ಪ್ರತಿಭಟನಾಕಾರರ ಮೇಲಿನ FIR ಹಿಂಪಡೆಯಲು ಕೇಂದ್ರ ಸಮ್ಮತಿ; ಶಿಕ್ಷಣ ಸುಧಾರಣೆಗೆ ಭರವಸೆ ದೇಶದಾದ್ಯಂತ ಸಂಚಲನ ಮೂಡಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ
News

Father Muller Charitable Institutions Reinforces Zero-Tolerance Policy on Ragging with Legal Awareness Programme

Reaffirming its unwavering commitment to fostering a safe, respectful, and inclusive academic environment, Father Muller Charitable Institutions (FMCI) observed Anti-Ragging

You cannot copy content of this page