ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಶನ್ ಗೌರವ ನಮನ
ಮಂಗಳೂರಿನಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಅದ್ದೂರಿ ಸನ್ಮಾನ – ಕರಾವಳಿಯ ಪ್ರತಿಭೆಗಳಿಗೆ ಭಾರೀ ಅಭಿನಂದನೆ

ಕರಾವಳಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ರೋಹನ್ ಕಾರ್ಪೊರೇಶನ್, 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ನಗರದ ಬಿಜೈನಲ್ಲಿರುವ ರೋಹನ್ ಸಿಟಿಯಲ ಜುಲಾಯಿ 25ರಂದು ಶನಿವಾರ ವಿಶೇಷ ಸನ್ಮಾನ ಸಮಾರಂಭ ಆಯೋಜಿಸಿ ಗೌರವ ಸಲ್ಲಿಸಿತು.
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮತ್ತು ತುಳು ಚಿತ್ರರಂಗಕ್ಕೆ ಕೀರ್ತಿ ತಂದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಅಭಿನಂದಿಸಿದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರು, ಮಾಧ್ಯಮ ಪ್ರತಿನಿಧಿಗಳು, ಗಣ್ಯರು ಹಾಗೂ ರೋಹನ್ ಕಾರ್ಪೊರೇಶನ್ ಸಿಬ್ಬಂದಿ ಭಾಗವಹಿಸಿ ಸಂಭ್ರಮ ಹಂಚಿಕೊಂಡರು.
ರೋಹನ್ ಕಾರ್ಪೊರೇಶನ್ನ ನಿರ್ದೇಶಕ ಡಿಯೋನ್ ಮೊಂತೇರೊ ಹಾಗೂ ಜನರಲ್ ಮ್ಯಾನೇಜರ್ ಸುಮನಾ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ರೂಪಶ್ರೀ ವರ್ಕಾಡಿ, ಅದೇ ಚಿತ್ರದ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ವಿಜೇತ ಮಾಸ್ಟರ್ ಅತೀಶ್ ಎಸ್. ಶೆಟ್ಟಿ, ಅತ್ಯುತ್ತಮ ಸಿನಿಮಾ ಕುರಿತ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ಪ್ರದೀಪ್ ಕೆಂಚನೂರು, ಹಾಗೂ ಅತ್ಯುತ್ತಮ ತುಳು ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದ ‘ಇಂಬು’ ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಮತ್ತು ನಿರ್ಮಾಪಕ ಪ್ರಶಾಂತ್ ರೈ ಅವರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿದ ಪ್ರಶಸ್ತಿ ವಿಜೇತರು ತಮ್ಮ ಸಂತಸವನ್ನು ವ್ಯಕ್ತಪಡಿಸಿ, ಈ ವಿಶೇಷ ಗೌರವಕ್ಕಾಗಿ ರೋಹನ್ ಕಾರ್ಪೊರೇಶನ್ಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ತಮ್ಮ ಕಲಾ ಪಯಣದ ಸವಾಲುಗಳು, ಸಾಧನೆಯ ಹಿಂದಿನ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ರಾಷ್ಟ್ರೀಯ ಮಟ್ಟದ ಗೌರವದ ಅನುಭವಗಳನ್ನು ಹಂಚಿಕೊಂಡು ಯುವ ಕಲಾವಿದರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಯೋನ್ ಮೊಂತೇರೊ, ರಾಷ್ಟ್ರೀಯ ಮಟ್ಟದಲ್ಲಿ ಕರಾವಳಿಯ ಪ್ರತಿಭೆಗಳು ಸಾಧಿಸಿರುವ ಯಶಸ್ಸು ಇಡೀ ಕರಾವಳಿ ಭಾಗಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ರೋಹನ್ ಕಾರ್ಪೊರೇಶನ್ಗೆ ಸಂತೋಷದ ವಿಚಾರವಾಗಿದ್ದು, ಅವರ ಸಾಧನೆಗಳು ಮುಂದಿನ ಪೀಳಿಗೆಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಥೆಗಾರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮವನ್ನು ಲವಿಟಾ ಡಿಸೋಜ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ವಂದನಾರ್ಪಣೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಸಮಾರೋಪಗೊಂಡಿತು.



