July 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ನ್ಯಾಯಕ್ಕಾಗಿ ಬೆಳಗಿದ ಸಾವಿರ ಆಶಾಕಿರಣಗಳು”

ನೀಟ್ ಹಗರಣ ಖಂಡಿಸಿ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಮೇಣದಬತ್ತಿಯ ಮೌನ ಪ್ರಾರ್ಥನೆ

ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಲಿ ಎಂಬ ಒಕ್ಕೊರಲಿನ ಆಗ್ರಹ; ಸತ್ಯ, ಪಾರದರ್ಶಕತೆ ಮತ್ತು ನ್ಯಾಯಯುತ ಶಿಕ್ಷಣ ವ್ಯವಸ್ಥೆಗೆ ಫಾದರ್ ವಾಲ್ಟರ್ ಕರೆ

ಶಿಕ್ಷಣದಲ್ಲಿ ನ್ಯಾಯ, ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯನ್ನು ಕಾಪಾಡುವಂತೆ ಒತ್ತಾಯಿಸಿ, ನೀಟ್–2026 ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಂದ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಜುಲಾಯಿ 25ರಂದು ಶನಿವಾರ ಸಂಜೆ ಹೃದಯಸ್ಪರ್ಶಿ ಮೇಣದಬತ್ತಿಯ ಮೌನ ಪ್ರಾರ್ಥನಾ ಪ್ರತಿಭಟನೆ ನಡೆಯಿತು. ಚರ್ಚ್‌ನ ಯುವ ಸಂಘಟನೆಗಳು ಹಾಗೂ ವಿವಿಧ ಆಯೋಗಗಳ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು, ಯುವಕರು, ಪೋಷಕರು, ಚರ್ಚ್ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ತಮ್ಮ ಧ್ವನಿಯನ್ನು ಮೌನದ ಮೂಲಕ ವ್ಯಕ್ತಪಡಿಸಿದರು.

ಉರಿಯುವ ಮೇಣದಬತ್ತಿಗಳನ್ನು ಕೈಯಲ್ಲಿ ಹಿಡಿದು ಮೌನವಾಗಿ ಪ್ರಾರ್ಥಿಸಿದ ಪ್ರತಿಭಟನಾಕಾರರು, ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಮಗ್ರ ತನಿಖೆಗೆ ಆಗ್ರಹಿಸಿದರು. ಅಲ್ಲದೆ, ಈ ಬೆಳವಣಿಗೆಯಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯಬೇಕು ಹಾಗೂ ದುಃಖಿತ ಕುಟುಂಬಗಳಿಗೆ ಸಾಂತ್ವನ ಮತ್ತು ನ್ಯಾಯ ಸಿಗಲಿ ಎಂದು ಪ್ರಾರ್ಥಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್‌ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ವಾಲ್ಟರ್ ಡಿಸೋಜ ಅವರು “ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಯಬೇಕಾದರೆ ನ್ಯಾಯ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಅನಿವಾರ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಿನ ಹಿಂದೆ ಅವರ ಪರಿಶ್ರಮ, ಕುಟುಂಬದ ತ್ಯಾಗ ಮತ್ತು ಭವಿಷ್ಯದ ಆಶಯಗಳಿವೆ. ಕಷ್ಟಪಟ್ಟು ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಯಾವುದೇ ಅಕ್ರಮವಿಲ್ಲದೆ ಸಮಾನ ಅವಕಾಶ ದೊರೆಯಬೇಕು. ಸತ್ಯ ಮತ್ತು ನ್ಯಾಯವೇ ನಮ್ಮ ಸಮಾಜದ ಬಲವಾಗಬೇಕು,” ಎಂದು ಅವರು ಕರೆ ನೀಡಿದರು.

ಅವರು ದೇಶದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ವೇಳೆ ನೀಟ್ ಹಗರಣದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಆತ್ಮಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಪುನಃಸ್ಥಾಪನೆಯಾಗಬೇಕು ಹಾಗೂ ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತವಾಗಿರಬೇಕು ಎಂಬ ಆಶಯವನ್ನು ಭಾಗವಹಿಸಿದವರು ವ್ಯಕ್ತಪಡಿಸಿದರು.

ಕೊನೆಯಲ್ಲಿ, “ಎಲ್ಲಾ ವಿದ್ಯಾರ್ಥಿಗಳಿಗೆ ನ್ಯಾಯ, ಶಾಂತಿ ಮತ್ತು ಉಜ್ವಲ ಭವಿಷ್ಯ ದೊರೆಯಲಿ” ಎಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಮೌನ ಪ್ರಾರ್ಥನಾ ಪ್ರತಿಭಟನೆ ಕೇವಲ ಒಂದು ಕಾರ್ಯಕ್ರಮವಾಗಿರದೆ, ಶಿಕ್ಷಣದಲ್ಲಿ ನ್ಯಾಯ, ಸತ್ಯ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ಪರವಾಗಿ ಚರ್ಚ್ ಸಮುದಾಯದ ಕಾಳಜಿ ಹಾಗೂ ಬದ್ಧತೆಯ ಅಭಿವ್ಯಕ್ತಿಯಾಗಿ ಎಲ್ಲರ ಮನಸ್ಸನ್ನು ಸ್ಪರ್ಶಿಸಿತು.

You may also like

News

ಯೋಧರ ತ್ಯಾಗವೇ ದೇಶದ ಧೈರ್ಯ, ಸ್ವಾತಂತ್ರ್ಯ ಮತ್ತು ಹೆಮ್ಮೆ – ಸಿಎಂ ಡಿ.ಕೆ. ಶಿವಕುಮಾರ್

ಕರ್ನಾಟಕ ರಕ್ಷಣಾ ಕ್ಷೇತ್ರದ ಬೆನ್ನೆಲುಬು – ಯೋಧರ ಕುಟುಂಬಗಳ ಹಿತ ಕಾಯಲು ಸರ್ಕಾರ ಬದ್ಧ “ನಮ್ಮ ವೀರ ಯೋಧರ ತ್ಯಾಗವೇ ದೇಶದ ಧೈರ್ಯ, ಸ್ವಾತಂತ್ರ್ಯ ಮತ್ತು ಹೆಮ್ಮೆಯಾಗಿದೆ.
News

ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ರೋಹನ್ ಕಾರ್ಪೊರೇಶನ್ ಗೌರವ ನಮನ

ಮಂಗಳೂರಿನಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಅದ್ದೂರಿ ಸನ್ಮಾನ – ಕರಾವಳಿಯ ಪ್ರತಿಭೆಗಳಿಗೆ ಭಾರೀ ಅಭಿನಂದನೆ ಕರಾವಳಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ತನ್ನ ಸಾಮಾಜಿಕ ಬದ್ಧತೆಯನ್ನು

You cannot copy content of this page