ವಿಟ್ಲದ ಇಡ್ಕಿದುವಿನಲ್ಲಿ ಒಂದೇ ರಾತ್ರಿ ದ್ವಿಚಕ್ರ ವಾಹನ ಕಳವು ಹಾಗೂ ವೃದ್ಧನ ಕೊರಳಿನಿಂದ ಚಿನ್ನದ ಸರ ಸುಲಿಗೆ – ಒಂದೇ ಗ್ಯಾಂಗ್ ಕೃತ್ಯ ಶಂಕೆ!
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದಲ್ಲಿ ಒಂದೇ ರಾತ್ರಿ ಬೈಕ್ ಕಳವು ಹಾಗೂ ಮನೆಯೊಳಗೆ ನುಗ್ಗಿ ವೃದ್ಧನ ಕೊರಳಿನಿಂದ ಚಿನ್ನದ ಸರ ಸುಲಿಗೆ ಮಾಡಿರುವ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ. ಈ ಎರಡೂ ಕೃತ್ಯಗಳನ್ನು ಒಂದೇ ಖದೀಮರ ತಂಡ ಎಸಗಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ವಿಟ್ಲ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆ 1: ಮನೆ ಅಂಗಳದಲ್ಲಿದ್ದ ದ್ವಿಚಕ್ರ ವಾಹನ ಕಳವು
ಇಡ್ಕಿದು ನಿವಾಸಿ 53 ವರ್ಷ ಪ್ರಾಯದ ಆನಂದ ಸಪಲ್ಯ ಎಂಬವರು ಜುಲಾಯಿ 25ರಂದು ಸಂಜೆ ತಮ್ಮ KA-19-EY-6282 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು (ಅಂದಾಜು ಮೌಲ್ಯ ₹30,000/-) ಮನೆಯ ಅಂಗಳದಲ್ಲಿ ನಿಲ್ಲಿಸಿದ್ದರು. ಮರುದಿನ ಜುಲಾಯಿ 26ರಂದು ಬೆಳಿಗ್ಗೆ ಎದ್ದು ನೋಡಿದಾಗ ವಾಹನ ಕಾಣೆಯಾಗಿತ್ತು. ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಅ.ಕ್ರ: 162/2026, ಕಲಂ: 303(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಘಟನೆ 2 : ವೃದ್ಧನ ಕೊರಳಿನಿಂದ ₹2.60 ಲಕ್ಷ ಮೌಲ್ಯದ ಚಿನ್ನದ ಸರ ಸುಲಿಗೆ
ಇದೇ ಗ್ರಾಮದ 79 ವರ್ಷ ಪ್ರಾಯದ ಕೆ. ಸೂರ್ಯನಾರಾಯಣ ಎಂಬವರು ಜುಲಾಯಿ 25ರ ರಾತ್ರಿ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ, ತಡರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯೊಳಗೆ ನುಗ್ಗಿದ್ದಾರೆ. ಸದ್ದ ಕೇಳಿ ಎಚ್ಚರಗೊಂಡ ಸೂರ್ಯನಾರಾಯಣ ಅವರ ಕೊರಳಿನಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು (ಅಂದಾಜು ಮೌಲ್ಯ ₹2,60,000/-) ಕಸಿದುಕೊಂಡ ದುಷ್ಕರ್ಮಿಗಳು, ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ. ಈ ಕುರಿತು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಅ.ಕ್ರ: 163/2026, ಕಲಂ: 329(4), 115(2), 309(4) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದೆ.

ಎರಡೂ ಘಟನೆಗಳು ಒಂದೇ ರಾತ್ರಿ ಹಾಗೂ ಒಂದೇ ಪರಿಸರದಲ್ಲಿ ನಡೆದಿರುವುದರಿಂದ, ಕಳ್ಳತನ ಹಾಗೂ ಸುಲಿಗೆ ಕೃತ್ಯಗಳನ್ನು ಒಂದೇ ಗ್ಯಾಂಗ್ ನಡೆಸಿದೆಯೇ ಎಂಬ ಕೋನದಲ್ಲಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



