August 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಮಾಜಮುಖಿ ಸೇವೆ – ದಿವಂಗತ ಸಹೋದರನ ಸ್ಮರಣಾರ್ಥ ಸಾರ್ವಜನಿಕ ಸೇವೆಗೆ ಆಂಬುಲೆನ್ಸ್ ಕೊಡುಗೆ ನೀಡಿದ ಬಶೀರ್ ಬಂಟ್ವಾಳ

ಮಾನವೀಯ ಸೇವೆಗೆ ಯಾವುದೇ ಜಾತಿ, ಮತ ಅಥವಾ ಧರ್ಮದ ಭೇದವಿಲ್ಲ ಎಂಬುದನ್ನು ಸಾರುವಂತೆ, ದುಬೈ ಅಸ್ತರ್ ಆಸ್ಪತ್ರೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಶೀರ್ ಬಂಟ್ವಾಳ ಅವರು ತಮ್ಮ ಅಗಲಿದ ಸಹೋದರ ಮರ್ಹೂಮ್ ಅಬ್ದುರ್ರಹ್ಮಾನ್ ಅವರ ಸ್ಮರಣಾರ್ಥ ಸಾರ್ವಜನಿಕ ಉಚಿತ ಸೇವೆಗಾಗಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಲೊರೆಟ್ಟೋಪದವು – ಟಿಪ್ಪು ನಗರದ ಇಝ್ಝತುನ್ನೂರು ಯತೀಂ ಖಾನಾಗೆ ಆಗಸ್ಟ್ 9ರಂದು ಭಾನುವಾರ ನಡೆದ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಈ ಆಂಬುಲೆನ್ಸ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

“ಸರ್ವ ಸಮಾಜದ ಆರೋಗ್ಯ ಸೇವೆ ನಮ್ಮ ಗುರಿ”:

ಆಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿದ ಬಶೀರ್ ಬಂಟ್ವಾಳ ಅವರು, “ನನ್ನ ದಿವಂಗತ ಸಹೋದರನ ನೆನಪಿನಲ್ಲಿ ಸಮಾಜಕ್ಕೆ ಈ ಸೇವೆಯನ್ನು ಅರ್ಪಿಸುತ್ತಿದ್ದೇನೆ. ಈ ಆಂಬುಲೆನ್ಸ್ ಸೇವೆಯನ್ನು ಜಾತಿ-ಮತದ ಭೇದವಿಲ್ಲದೆ ತುರ್ತು ಅಗತ್ಯವಿರುವ ಪ್ರತಿಯೊಬ್ಬ ಸಾರ್ವಜನಿಕರೂ ಪಡೆದುಕೊಳ್ಳಬಹುದು. ಈ ಮೂಲಕ ಸರ್ವ ಸಮಾಜದ ಜನರಿಗೆ ಸೂಕ್ತ ಆರೋಗ್ಯ ಸೇವೆ ಲಭಿಸುವಂತಾಗಲಿ” ಎಂದು ಆಶಿಸಿದರು.

ಧರ್ಮಗುರು ಜೇಮ್ಸ್ ಡಿಸೋಜ ಹಾಗೂ ಗಣ್ಯರ ಶ್ಲಾಘನೆ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೊರೆಟ್ಟೋ ಚರ್ಚ್ ನ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜ ಅವರು ಮಾತನಾಡಿ, “ಮನುಷ್ಯನಲ್ಲಿ ಎಷ್ಟೇ ಸದ್ಗುಣಗಳಿದ್ದರೂ ಮಾನವೀಯತೆ ಇಲ್ಲದಿದ್ದರೆ ಆತನ ಜೀವನ ಸಾರ್ಥಕವಾಗುವುದಿಲ್ಲ. ಅಶಕ್ತರ ಹಾಗೂ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಭಗವಂತನ ಅನುಗ್ರಹ ಮತ್ತು ಪ್ರೀತಿ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಶೀರ್ ಅವರ ಕಾರ್ಯ ಅತ್ಯಂತ ಶ್ಲಾಘನೀಯ” ಎಂದರು.

ಸಯ್ಯಿದ್ ಅಸ್ಗರ್ ಅಲಿ ತಂಙಳ್ ಗಂಜಿಮಠ ಅವರು ದುಹಾ (ಪ್ರಾರ್ಥನೆ) ನೆರವೇರಿಸಿದರು. ಬಂಟ್ವಾಳ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಮದ್ ಯಮಾನಿ, ಅಡ್ಯಾರ್ – ಕಣ್ಣೂರು ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಬುರ್ಹಾನಿ ಹಾಗೂ ನಿವೃತ್ತ ಶಿಕ್ಷಕಿ ಪ್ರಫುಲ್ಲಾ ಅವರು ಬಶೀರ್ ಬಂಟ್ವಾಳ ಅವರ ಸಮಾಜಮುಖಿ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಪ್ರಮುಖರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭೆಯ ನಿಕಟಪೂರ್ವ ಸದಸ್ಯ ಎ. ಗೋವಿಂದ ಪ್ರಭು, ಯತೀಂ ಖಾನಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಕೋಶಾಧಿಕಾರಿ ಹಂಝ ಪರ್ಲಿಯ, ಲೊರೆಟ್ಟೋಪದವು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ರಿಯಾಝ್, ಪ್ರಮುಖರಾದ ಸುಲೈಮಾನ್ ಬಂಟ್ವಾಳ, ಅಹ್ಮದ್ ಹುಸೈನ್ ಮೂಡುಬಿದಿರೆ, ಹಾರೂನ್ ರಶೀದ್ ಬಂಟ್ವಾಳ, ಖಲೀಲುಲ್ಲಾ ಬಂಟ್ವಾಳ, ಹಮೀದ್ ನಿಝಾಮಿ ಹಾಗೂ ಶಾಕಿರ್ ಮತ್ತಿತರರು ಉಪಸ್ಥಿತರಿದ್ದರು.

ಯತೀಂ ಖಾನಾದ ಗುರುಗಳಾದ ಖಲಂದರ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಾದಾತ್ ಕಾವಳಕಟ್ಟೆ ಕಿರಾಅತ್ ಪಠಿಸಿದರೆ, ರಾಜ್ಯ ತರಬೇತುದಾರ ಹಾಗೂ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page