ಸೆಪ್ಟೆಂಬರ್ 14ರಿಂದ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ 9 ದಿನಗಳ ನೊವೇನಾ – ಸೆಪ್ಟೆಂಬರ್ 23ರಂದು ವಾರ್ಷಿಕ ಮಹೋತ್ಸವ
ಸಿಟಿ ವಲಯದ ಶ್ರೇಷ್ಠಗುರು ಫಾದರ್ ರಿಚಾರ್ಡ್ ಕುವೆಲ್ಲೊ ಅವರಿಂದ ಧ್ವಜಾರೋಹಣ

ಮಂಗಳೂರಿನ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿರುವ ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವವು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ಸಂಭ್ರಮದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 14ರಿಂದ 22ರವರೆಗೆ ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ ಪ್ರತಿದಿನ ಸಂಜೆ ನಡೆಯಲಿದೆ. ಪ್ರತಿದಿನ ಸಂಜೆ 5.30ಕ್ಕೆ ಪರಮ ಪ್ರಸಾದದ ಆರಾಧನೆ ಹಾಗೂ ಸಂಜೆ 6 ಗಂಟೆಗೆ ಬಲಿಪೂಜೆ ಮತ್ತು ನೊವೇನಾ ಪ್ರಾರ್ಥನೆ ನೆರವೇರಲಿದೆ.
ಸೆಪ್ಟೆಂಬರ್ 14ರಂದು ಸಂಜೆ 5.30ಕ್ಕೆ ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಪ್ರಧಾನ ಗುರು ಹಾಗೂ ಪಾಲ್ದನೆ ಚರ್ಚ್ನ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಧ್ವಜಾರೋಹಣ ನೆರವೇರಿಸಿ ನೊವೇನಾ ಪ್ರಾರ್ಥನೆಗೆ ಚಾಲನೆ ನೀಡಲಿದ್ದು, ಬಳಿಕ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.

2026 ಸೆಪ್ಟೆಂಬರ್ 23ರಂದು ಸೈಂಟ್ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ನಡೆಯಲಿದೆ. “ದೇವರ ಮಕ್ಕಳಾಗಿರುವ ನಾವು ಅವರ ರಾಜ್ಯವನ್ನು ಅರಸುತ್ತಾ, ಪಾದ್ರೆ ಪಿಯೊ ಅವರ ಜೀವನದ ಆದರ್ಶವನ್ನು ಅನುಸರಿಸೋಣ” ಎಂಬುದು ಈ ವರ್ಷದ ಮಹೋತ್ಸವದ ವಿಷಯ ಹಾಗೂ ಸಂದೇಶವಾಗಿದೆ.
ಪಾದ್ರೆ ಪಿಯೊ ಅವರ ಆಧ್ಯಾತ್ಮಿಕ ಆದರ್ಶ ಹಾಗೂ ಪ್ರಾರ್ಥನಾ ಜೀವನದಿಂದ ಸ್ಫೂರ್ತಿ ಪಡೆದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೊವೇನಾ ಪ್ರಾರ್ಥನೆ ಹಾಗೂ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆಯುವಂತೆ ಪುಣ್ಯ ಕ್ಷೇತ್ರದ ವತಿಯಿಂದ ವಿನಂತಿಸಲಾಗಿದೆ.



