August 21, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಆಲ್ಬರ್ಟ್ ಜಿ. ಮಿನೇಜಸ್ ನಿಧನ

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು 94 ವರ್ಷ ಪ್ರಾಯದ ವಂದನೀಯ ಆಲ್ಬರ್ಟ್ ಗ್ರೆಗರಿ ಮಿನೇಜಸ್ ಅವರು ಇಂದು ಆಗಸ್ಟ್ 21ರಂದು ಶುಕ್ರವಾರ ಜೆಪ್ಪುವಿನ ‘ಸೈಂಟ್ ಜುಜೆ ವಾಝ್ ಹೋಮ್’ನಲ್ಲಿ ನಿಧನರಾದರು.

1932 ಡಿಸೆಂಬರ್ 23ರಂದು ಅಗ್ರಾರ್‌ನಲ್ಲಿ ಪಿ. ಜೇಕಬ್ ಮೆನೇಜಸ್ ಮತ್ತು ಮೆರ್ಸಿನ್ ಡಿಸೋಜ ದಂಪತಿಯ ಮಗನಾಗಿ ಜನಿಸಿದ ಅವರು, 1959 ಡಿಸೆಂಬರ್ 5ರಂದು ಗುರುದೀಕ್ಷೆ ಪಡೆದಿದ್ದರು. ಸುಮಾರು ಏಳು ದಶಕಗಳ ಕಾಲ ಅವರು ಆಧ್ಯಾತ್ಮಿಕ ಮತ್ತು ಧರ್ಮಸಭೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರು ಕಾರ್ಕಳದ ಸೈಂಟ್ ಲಾರೆನ್ಸ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ (1960), ಬೆಳ್ಳೆ, ಉದ್ಯಾವರ, ಕಿರೆಂ ಮತ್ತು ಬಿಜೈ ಚರ್ಚ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ನಂತರ ನೆಲ್ಲಿಕಾರು (1969), ವಿಟ್ಲ (1976), ಅಜೇಕಾರು (1983), ಹೊಸಬೆಟ್ಟು (1985), ಕಣಜಾರು (1986), ಗಂಗೊಳ್ಳಿ (1993), ಪೇತ್ರಿ (1995), ಬಳ್ಕುಂಜೆ (1997) ಮತ್ತು ಕಳತ್ತೂರು (2000) ಚರ್ಚ್‌ಗಳಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಮೇರಿ ಹಿಲ್‌ನಲ್ಲಿ ಚ್ಯಾಪ್ಲಿನ್ ಹಾಗೂ ಮುಕ್ಕಾದಲ್ಲಿ ಪರಿಪಾಲಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

2008 ರಲ್ಲಿ ನಿವೃತ್ತರಾದ ಅವರು ಸೈಂಟ್ ಆ್ಯಂಟನಿ ಆಶ್ರಮದ ಹಿರಿಯ ಧರ್ಮಗುರುಗಳ ನಿವಾಸದಲ್ಲಿ ಹಾಗೂ ಬಳಿಕ ಜೆಪ್ಪುವಿನ ಸೈಂಟ್ ಜುಜೆ ವಾಝ್ ಹೋಮ್ ನಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು.

ಅಂತಿಮ ಸಂಸ್ಕಾರ:

ಮೃತ ಧರ್ಮಗುರುವಿನ ಅಂತಿಮ ಸಂಸ್ಕಾರ ಮತ್ತು ಪ್ರಾರ್ಥನಾ ವಿಧಿಗಳು ಆಗಸ್ಟ್ 24ರಂದು ಸೋಮವಾರ ಮಧ್ಯಾಹ್ನ 3:30 ಕ್ಕೆ ವಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್‌ನಲ್ಲಿ ನಡೆಯಲಿದೆ. ಮಂಗಳೂರು ಧರ್ಮಕ್ಷೇತ್ರವು ಅವರ ಸುದೀರ್ಘ ಸೇವೆಯನ್ನು ಸ್ಮರಿಸಿ, ಸಂತಾಪ ಸೂಚಿಸಿದೆ.

You may also like

News

ಸಂಶೋಧನೆ, ಆವಿಷ್ಕಾರಗಳಿಂದ ದೇಶದ ಪ್ರಗತಿ ಸಾಧ್ಯ – ಡಾ. ಅರುಣಕುಮಾರ್ ಶೆಟ್ಟಿ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನಿರಂತರವಾಗಿ ಮುನ್ನಡೆಯುತ್ತಿದ್ದು, ಸಂಶೋಧನೆಗಳ ಮೂಲಕ ವಿಜ್ಞಾನಿಗಳು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಯುವಜನತೆ ಆವಿಷ್ಕಾರ, ಸಹಯೋಗ ಮತ್ತು ನಾಯಕತ್ವದ
News

ವೈದ್ಯಕೀಯ ನಿರ್ಲಕ್ಷ್ಯದ ಆರೋಪ ತಳ್ಳಿಹಾಕಿದ ಮಂಗಳೂರಿನ SCS ಆಸ್ಪತ್ರೆ

ರೋಗಿಯ ಸ್ಥಿತಿ ಸ್ಥಿರವಾಗಿತ್ತು – ಕುಟುಂಬಸ್ಥರಿಂದ ಬಿಲ್‌ ರಿಯಾಯಿತಿಗೆ ಒತ್ತಾಯಿಸಿದ ಆರೋಪ ಮಂಗಳೂರಿನ ಬೆಂದೂರು SCS ಆಸ್ಪತ್ರೆಯಲ್ಲಿ ರೋಗಿಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ನೀಡಲಾಗಿಲ್ಲ ಹಾಗೂ ವೈದ್ಯಕೀಯ

You cannot copy content of this page