ಪ್ರಾಂಶುಪಾಲೆಗೆ 27 ಬಾರಿ ಇರಿತ – 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ
ಹಣ ಹಾಗೂ ಐಷಾರಾಮಿ ಜೀವನದ ಆಸೆಗಾಗಿ ಶಾಲಾ ಪ್ರಾಂಶುಪಾಲೆ ಹಾಗೂ ನಿರ್ದೇಶಕಿ 48 ವರ್ಷ ಪ್ರಾಯದ ಕಲ್ಲು ರೂಪಾ ರೆಡ್ಡಿ ಅವರನ್ನು 27 ಬಾರಿ ಇರಿದು ಹತ್ಯೆ ಮಾಡಿದ ಆರೋಪದ ಮೇಲೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆಯಾಗಿದ್ದ ರೂಪಾ ರೆಡ್ಡಿ ಅವರು ಆಗಸ್ಟ್ 12ರಂದು ತಮ್ಮ ನಿವಾಸದಲ್ಲಿ 27 ಇರಿತದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆಗಾಗಿ ಐದು ತಂಡಗಳನ್ನು ರಚಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚುಗಳು ಹಾಗೂ ತಾಂತ್ರಿಕ ದತ್ತಾಂಶಗಳನ್ನು ಪರಿಶೀಲಿಸಿ 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.


‘ಬಾಬು’ ಪದದಿಂದ ಸಿಕ್ಕಿತು ಪ್ರಮುಖ ಸುಳಿವು:
ರೂಪಾ ರೆಡ್ಡಿ ಅವರು ಸಾವಿಗೂ ಮುನ್ನ ದೂರವಾಣಿ ಸಂಭಾಷಣೆಯಲ್ಲಿ ಬಳಸಿದ್ದ ‘ಬಾಬು’ ಎಂಬ ಪದ ತನಿಖೆಗೆ ಪ್ರಮುಖ ಸುಳಿವಾಯಿತು. ಬಳಿಕ ಶಾಲೆಗೆ ಗೈರುಹಾಜರಾಗಿದ್ದ ಐವರು 10ನೇ ತರಗತಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗಮನ ಹರಿಸಿದರು. ಈ ಪೈಕಿ ಇಬ್ಬರು ಇತ್ತೀಚೆಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದು, ಪಾರ್ಟಿಗಳನ್ನು ನಡೆಸುತ್ತಿದ್ದದ್ದು ಅನುಮಾನಕ್ಕೆ ಕಾರಣವಾಯಿತು.
ವಿಚಾರಣೆ ವೇಳೆ ಇಬ್ಬರು ವಿದ್ಯಾರ್ಥಿಗಳು ಕೊಲೆಯನ್ನು ಯೋಜಿಸಿ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಐದು ದಿನ ಸಂಚು – ಹಣಕ್ಕಾಗಿ ಭೀಕರ ಹತ್ಯೆ:
ಪೊಲೀಸರ ಪ್ರಕಾರ, ಆರೋಪಿಗಳು ಸುಮಾರು ಐದು ದಿನಗಳ ಕಾಲ ಕೊಲೆಗೆ ಸಂಚು ರೂಪಿಸಿದ್ದರು. ಚಾಕು ಹಾಗೂ ಕೈಗವಸುಗಳನ್ನು ಖರೀದಿಸಿ, ತಮ್ಮ ಗುರುತು ಪತ್ತೆಯಾಗದಂತೆ ಯೋಜನೆ ರೂಪಿಸಿದ್ದರು. ಕೊಲೆಯ ದಿನ ಮಂಕಿ ಕ್ಯಾಪ್ ಧರಿಸಿ ಮನೆಗೆ ಪ್ರವೇಶಿಸಿದ ಆರೋಪಿಯೊಬ್ಬ, ಮಲಗುವ ಕೋಣೆಯಲ್ಲಿದ್ದ ₹2.50 ಲಕ್ಷ ಹಣ ತೆಗೆದುಕೊಂಡು ಪರಾರಿಯಾಗಲು ಮುಂದಾಗಿದ್ದ.
ಈ ವೇಳೆ ಮಂಕಿ ಕ್ಯಾಪ್ ಜಾರಿದ್ದರಿಂದ ರೂಪಾ ರೆಡ್ಡಿ ಆರೋಪಿಯನ್ನು ಗುರುತಿಸಿದ್ದರು ಎನ್ನಲಾಗಿದೆ. ಗುರುತು ಬಹಿರಂಗವಾಗುವ ಭಯದಿಂದ ಆರೋಪಿ ಚಾಕುವಿನಿಂದ ಅವರಿಗೆ 27 ಬಾರಿ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೊಲೆಯ ಬಳಿಕ ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ಮಂಕಿ ಕ್ಯಾಪ್ಗಳನ್ನು ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪಿಗಳು ಬಳಿಕ ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ.
ಆರೋಪಿಗಳಿಂದ ರಕ್ತದ ಕಲೆಗಳಿದ್ದ ನಗದು, iPhone ಹಾಗೂ ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ ಸೇರಿದಂತೆ ₹1.54 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗೂ ಮುನ್ನ ತ್ವರಿತವಾಗಿ ಹಣ ಗಳಿಸುವ ಮಾರ್ಗಗಳಿಗಾಗಿ ಆರೋಪಿಗಳು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



